10+ ಕನ್ನಡ ಚಿತ್ರಗಳ ಫೆ.6 ಬಿಡುಗಡೆ: ಕರಿಕಾಡ, ಕಟ್ಲೆ, ಸರ್ಕಾರಿ ಶಾಲೆ H8
ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಸಿನಿಮಾ ಈಗಾಗಲೇ ಪ್ರೀಮಿಯರ್ ಶೋ ಮೂಲಕ ಸದ್ದು ಮಾಡಿದೆ. ಪ್ರಖ್ಯಾತ್ ಅಭಿನಯದ ‘ಜೆಸಿ ದಿ ಯೂನಿವರ್ಸಿಟಿ’ ಸಿನಿಮಾ ಕೂಡ ಟ್ರೇಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ಇವುಗಳ ಜೊತೆಯಲ್ಲಿ ಇನ್ನೂ ಹಲವು ಸಿನಿಮಾಗಳು ಫೆಬ್ರವರಿ 6ರಂದು ಬಿಡುಗಡೆ ಆಗುತ್ತಿವೆ. ಆ ಬಗ್ಗೆ ಇಲ್ಲಿದೆ ವಿವರ..
ಫೆಬ್ರವರಿ 6ರಂದು ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾಗಳು (New Kannada Movies) ಬಿಡುಗಡೆ ಆಗುತ್ತಿವೆ. 10ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಈ ವಾರದ ಪ್ರಮುಖ ಆಕರ್ಷಣೆ ಎಂದರೆ ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ (Rakkasapuradhol) ಮತ್ತು ಡಾಲಿ ಧನಂಜಯ ನಿರ್ಮಾಣದ ‘ಜೆಸಿ ದಿ ಯೂನಿವರ್ಸಿಟಿ’. ಇವುಗಳು ಮಾತ್ರವಲ್ಲದೇ ‘ಕಟ್ಲೆ’, ‘ಕರಿಕಾಡ’, ‘ಘಾರ್ಗಾ’, ‘ಸುಖೀಭವ’ ಮುಂತಾದ ಸಿನಿಮಾಗಳು ತೆರೆಕಾಣುತ್ತಿವೆ. ಫೆಬ್ರವರಿ 6ರಂದು ಬಿಡುಗಡೆ ಆಗಲಿರುವ ಕನ್ನಡ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ..
ರಕ್ಕಸಪುರದೋಳ್: ಈ ವಾರದ ಬಹುನಿರೀಕ್ಷಿತ ಚಿತ್ರಗಳಲ್ಲಿ ಇದೂ ಒಂದು. ರಾಜ್ ಬಿ. ಶೆಟ್ಟಿ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಮರ್ಡರ್ ಮಿಸ್ಟರಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಹಿರಿಯ ನಿರ್ದೇಶಕ ಪ್ರೇಮ್ ಅವರ ಸಹಾಯಕ ರವಿ ಸಾರಂಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸ್ವಾದಿಷ್ಠ ಕೃಷ್ಣ, ಅರ್ಚನಾ ಕೊಟ್ಟಿಗೆ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಜೆ.ಸಿ. ದಿ ಯೂನಿವರ್ಸಿಟಿ: ಈ ಸಿನಿಮಾದಲ್ಲಿ ಸೂರ್ಯ ಪ್ರಖ್ಯಾತ್ ಅವರು ನಟಿಸಿದ್ದಾರೆ. ಡಾಲಿ ಧನಂಜಯ ಅವರು ಈ ಸಿನಿಮಾಗೆ ಹಣ ಹೂಡಿದ್ದಾರೆ. ಈ ಮೊದಲು ‘ನಡುವೆ ಅಂತರವಿರಲಿ’ ಸಿನಿಮಾದಲ್ಲಿ ಪ್ರಖ್ಯಾತ್ ಅಭಿನಯಿಸಿದ್ದರು. ಈಗ ಜೆ.ಸಿ. ದಿ ಯೂನಿವರ್ಸಿಟಿ ಸಿನಿಮಾ ಮೂಲಕ ಮನರಂಜನೆ ನೀಡಲು ಬರುತ್ತಿದ್ದಾರೆ. ಚೇತನ್ ಜಯರಾಮ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಕರಿಕಾಡ: ಹಳ್ಳಿಗಾಡಿನ ಕಥಾಹಂದರ ಇರುವ ‘ಕರಿಕಾಡ’ ಸಿನಿಮಾ ಕೂಡ ಈ ವಾರ ರಿಲೀಸ್ ಆಗುತ್ತಿದೆ. ಕಾಡ ನಟರಾಜ್ ಅವರು ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಯಶ್ ಶೆಟ್ಟಿ, ಬಲರಾಜ್ವಾಡಿ, ವಿಜಯ್ ಚೆಂಡೂರು ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಕೂಡ ಈ ಸಿನಿಮಾವನ್ನು ತೆರೆಕಾಣಿಸಲಾಗುತ್ತಿದೆ.
ಕಟ್ಲೆ: ಈ ಸಿನಿಮಾದಲ್ಲಿ ಹಾಸ್ಯ ನಟ ಕೆಂಪೇಗೌಡ ಅವರು ನಟಿಸಿದ್ದಾರೆ. ಅವರು ಹೀರೋ ಆಗಿ ನಟಿಸಿರುವ ಮೊದಲ ಸಿನಿಮಾ ಇದು. ಹಲವಾರು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ನಟಿಸಿದ್ದ ಅವರು ಈಗ ಹೀರೋ ಆಗಿದ್ದಾರೆ. ಆ ಕಾರಣದಿಂದ ‘ಕಟ್ಲೆ’ ಸಿನಿಮಾ ಅವರ ಪಾಲಿಗೆ ಸ್ಪೆಷಲ್ ಆಗಿದೆ. ಶ್ರೀವಿಧಾ ಅಭಿನಂದನ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಸರ್ಕಾರಿ ಶಾಲೆ ಹೆಚ್8: ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟ ಅವರು ‘ಸರ್ಕಾರಿ ಶಾಲೆ H8’ ಸಿನಿಮಾದಲ್ಲಿ ನಟಿಸಿದ್ದಾರೆ. ಗುಣ ಹರಿಯಬ್ಬೆ, ರಾಘವೇಂದ್ರ ರಾಜ್ಕುಮಾರ್, ಮೇಘಶ್ರೀ, ಸುಚೇಂದ್ರ ಪ್ರಸಾದ್, ವೈಜನಾಥ್ ಬಿರಾದರ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಗುಣ ಹರಿಯಬ್ಬೆ ಅವರ ನಿರ್ದೇಶನ ಈ ಸಿನಿಮಾಗಿದೆ.
ಅರುಣ್ ರಾಮ್ ಪ್ರಸಾದ್ ನಟನೆಯ ‘ಘಾರ್ಗಾ’, ಮಹೇಂದ್ರ ಕುಮಾರ್ ಅಭಿನಯದ ‘ಸುಖೀಭವ’, ಮೊಹಮದ್ ಅಬ್ಜಲ್ ನಟನೆಯ ‘ನೆನಪುಗಳ ಮಾತು ಮಧುರ’, ಆಕರ್ಷ್ ಆದಿತ್ಯ ಅಭಿನಯದ ‘ಬಯಕೆಗಳು ಬೇರೂರಿದಾಗ’, ಅಥರ್ವ ಪ್ರಕಾಶ್ ನಟನೆಯ ‘ನಾನ್-ವೆಜ್’ ಸಿನಿಮಾ ಕೂಡ ಫೆಬ್ರವರಿ 6ರಂದು ಬಿಡುಗಡೆ ಆಗುತ್ತಿವೆ.














Comments